ಕವನ - ಹುತಾತ್ಮ ಭಗತ್ ಸಿಂಗ್
ನೀನೆಂದರೆ ಬಿಸಿ ನೆತ್ತರ ಧಗೆಯು ನೀನಲ್ಲವೆ ಬಿರುಗಾಳಿಯ ವೇಗವು ನೀನಾದೆ ಬ್ರಿಟಿಷರಿಗೆ ಸಿಂಹಸ್ವಪ್ನವು ನೀನೇ ಯುವಬಲದ ಮೂಲಾರ್ಥವು . ಕಡೆಗಣಿಸಿ ನಿನ್ನವರ ಧುಮುಕಿದೆ ಸ್ವಾತಂತ್ರ್ಯವನ್ನರಸಿ ಕ್ಷಣಕ್ಷಣವು ಪರಿತಪಿಸಿದೆ ದೌರ್ಜನ್ಯವ ನೆನೆಸಿ ದಬ್ಬಾಳಿಕೆಯೆದುರು ಅಬ್ಬರಿಸಿ ಹೆಬ್ಬುಲಿಯಾದೆ ಯುವಶಕ್ತಿಯನೆಚ್ಚರಿಸಿ ನೀ ಅಮರನಾದೆ . ಅರ್ಥಪೂರ್ಣ ನೀನು ಬದುಕಿದ ರೀತಿ , ಅಮೂಲ್ಯ ನಿನ್ನ ದೇಶಪ್ರೀತಿ , ಅಮೋಘ ನಿನ್ನ ಸಾಹಸವೃತ್ತಿ , ಅಪರೂಪ ನಿನ್ನ ಮಾನವಪ್ರೀತಿ . ಆದರೆ , ಮರೆತೇಹೋಗಿದೆ ಮರೆಯಾಗಿಯೇ ಹೋಗಿದೆ ಆ ಬಲಿದಾನ , ಅಳಿಸಿ ಹೋಗಿದೆ ಅರಿವಿನಲ್ಲಿರದಾಗಿದೆ ಆ ರಕ್ತದಾನ , ಮತ್ತಿನಲ್ಲಿದೆ ಮಾದಕತೆಯಲ್ಲಿ ಮುಳುಗಿದೆ ಈ ಯುವಜನ . ಜಡವ ತೊಲಗಿಸಲಿ ಜನರಲ್ಲಿ ನಿನ್ನ ನೆನಪು ಭಯವೇ ಬೆದರೋಡಲಿ ನೆನೆದಾಗ ನಿನ್ನ ಬದುಕು ಉತ್ಸಾಹವನುಕ್ಕಿಸಲಿ ನಿನ್ನ ಉಕ್ಕಿನೋಕ್ತಿಗಳು ಆವೇಶವನ್ನೆಬ್ಬಿಸಲಿ ನಿನ್ನ ಘೋಷಗಳು .