ಕವನ - ಇಂಗದ ರಕ್ತದಾಹ
ಅಲ್ಲಾಹು ಇದ್ದಿದ್ದರೆ ಇದ
ಮಾಡಗೊಡುತ್ತಿರಲಿಲ್ಲ
ಜೀಸಸ್ ...ಪಾಪಿಗಳನ್ನು ಕ್ಷಮಿಸಿದ
ತನ್ನ ಮಕ್ಕಳಿಗೇಕೆ ರಕ್ಷಣೆಯನ್ನೀಯಲಿಲ್ಲ
ಕೋಟಿಕೋಟಿ ಹಿಂದೂ ದೇವತೆಗಳಿಗೆ
ಭಾರತದಲ್ಲೇ ಬಿಲಿಯನ್ ಸಮಸ್ಯೆಗಳು
ಕ್ಷಮಿಸಿ.......ಅವರಿಗೆ ಬಿಡುವಿಲ್ಲ
ಖುರಾನ್ ದೇವರೆ ನೀನು
ದಯೆಗೇ ದಯಸ್ವರೂಪಿಯಂತೆ
ನಿನ್ನ ಕೃಪಾಕಟಾಕ್ಷ ಬಯಸಿದವರಿಗೆ
ಮೃತರಿಗೂ ಜೀವ ನೀಡುವಿಯಂತೆ
ನಿನಗೆ ಬಾಗಿ ಜಗವೆಲ್ಲ ಈಗ ಪ್ರಾರ್ಥಿಸುವುದು
ನೀನೊಬ್ಬನೇ ದಿಕ್ಕೆಂದು ನಂಬುವುದು
ಬರುವುದೋ ಹೋದ ಜೀವ
ಅಳಿಸುವೆಯಾ ಕಳಕೊಂಡವರ ನೋವ
ನಾನೇಕೆ ಸತ್ತೆನೆಂದೇ ತಿಳಿಯದವ
ಪ್ರಶ್ನೆ ಹುಟ್ಟಲೂ ಮುಂಚೆ ಪ್ರಾಣ ಪಕ್ಷಿ
ಹಾರಿ ಹೋಗಿ ಎಲ್ಲರನ್ನು ತೊರೆದವ
ಅವನ ಅರೆತೆರದ ಅಕ್ಷಿ ಕುಕೃತ್ಯದ ಸಾಕ್ಷಿ
ದೇವರ ಹೆಸರಲ್ಲಿ ಮೃಗದ ರಕ್ತದಾಹ
ಮನುಕುಲದ ನಾಶಕ್ಕೆ ಹರಡುತಿಹ
ಮತೀಯ ಮತ್ತಿನ ಮೋಹ
ಹಿರಿಯರ ತ್ಯಾಗಕ್ಕೆ ವ್ಯವಸ್ಥಿತ ದ್ರೋಹ
ಇನ್ನೆಷ್ಟು ದಿನ ಅವರ ಹಟ
ಬುಡ ಸಹಿತ ಕೀಳಲು
ಮತ್ತೆ ಮೊಳೆಯದಿರಲು
ಒಗ್ಗಟ್ಟಿನ ಹೆಜ್ಜೆ ಬೇಕು ದಿಟ
ವಿಶ್ವ ಯುದ್ಧ ನಡೆಯಲಿ
ಉಗ್ರರ ವಿರುದ್ಧ
ಇದಕೂ ಮೊದಲಿರಲಿ
ನಾವೆಲ್ಲ ಒಂದೆ ಎಂಬ ಮಾತಿಗೆ ಬದ್ಧ

Comments
Post a Comment